ಹುಬ್ಬಳ್ಳಿ : ವಿಜಯಪುರ ಜಿಲ್ಲೆಯ ಬೀಳಗಿಯ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಇದೇ ದಿ. ೧೩ ರಂದು ಬೆ. ೯.೩೦ ಕ್ಕೆ ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾ ಸ್ವಾಮಿಗಳು ಚಾಲನೆ ನೀಡಲೀದ್ದಾರೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ೧೭ ರಂದು ಸಾಯಂಕಾಲ ೩.೩೦ ಕ್ಕೆ ಬೀಳಗಿ ತಾಲೂಕಿನ ಬಾಡಗಂಡಿಯ ಬಾಪೂಜಿ ಅಂತರಾಷ್ಟ್ರೀಯ ಶಾಲೆಯ ಆವರಣದಲ್ಲಿ ಅಸಂಖ್ಯಾತ ಶ್ರೀಗಳ ಸಾನಿಧ್ಯದಲ್ಲಿ ಬೃಹತ್ ಪ್ರಮಾಣದ ಜನಸಮೂಹದೊಂದಿಗೆ ಟ್ರ್ಯಾಕ್ಟರ್ ಯಾತ್ರೆ ಸಮಾರೋಪಗೊಳ್ಳಲಿದೆ ಎಂದರು.
ಈ ಹಿಂದೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿ ನನ್ನ ಕೊನೆಯ ಅಧಿವೇಶನದಲ್ಲಿ ಇದೇ ವಿಷಯವಾಗಿ ಪ್ರಸ್ತಾಪಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ೩ ನೇ ಹಂತ ತ್ವರಿತವಾಗಿ ನಡೆಯದಿದ್ದರೆ ಪಕ್ಷಾತೀತವಾಗಿ ಟ್ರ್ಯಾಕ್ಟರ್ ಯಾತ್ರೆ ಮಾಡುವುದಾಗಿ ಸದನದಲ್ಲಿ ಹೇಳಿದ್ದೆ, ಅಲ್ಲದೇ ಟ್ಯಾಕ್ಟರ್ ರ್ಯಾಲಿಗೂ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಸರದಿ ಸತ್ಯಾಗ್ರಹ ಮಾಡುವುದಾಗಿ ಹೇಳಲಾಗಿತ್ತು, ಆದ್ದರಿಂದ ಸರಕಾರ ಯಾವುದಕ್ಕೂ ಸ್ಪಂದಿಸದೇ ಇರುವುದರ ಹಿನ್ನೆಲೆಯಲ್ಲಿ ಇಂದು ಜಾತ್ಯಾತೀತವಾಗಿ ಈ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ೩ ನೇ ಹಂತ, ಮಹಾದಾಯಿ ಮತ್ತು ನವಲಿ ನೀರಾವರಿ ಯೋಜನೆಗಳು ತ್ವರಿತವಾಗಿ ಅನುಷ್ಠಾನಗೊಳಿಸುಂತೆ ಈ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಲಾಗಿದೆ, ರೈತರು ಈ ರ್ಯಾಲಿಗೆ ಕೈ ಜೋಡಿಸಿ, ರ್ಯಾಲಿ ಯಶಸ್ವಿಗೊಳಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಯಾವಗಲ್, ರಾಜುಗೌಡ ಪಾಟೀಲ್, ಡಾ. ಸಂಗಮೇಶ ಕೊಳ್ಳಿ, ಹನಮಂತಪ್ಪ ಮೇಟಿ, ಪ್ರಕಾಶ ಶಂಕರಗೌಡ ಸೇರಿದಂತೆ ಉಪಸ್ಥಿತರಿದ್ದರು..