ಹುಬ್ಬಳ್ಳಿ: ಸರ್ಕಾರದ ಕಾರ್ಮಿಕ ವಿರೋಧಿ, ಜನವಿರೋಧಿ, ಕಾರ್ಪೋರೆಟ್ ಪರವಾದ ದಾಳಿಯನ್ನು ಪ್ರತಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಶನ್ ಗಳ ಕರೆಯ ಮೇರೆಗೆ ಎಐಯುಟಿಯುಸಿ ಜಿಲ್ಲಾ ಸಮಿತಿಯು ಇದೇ ದಿ. ೨೮ ಹಾಗೂ ೨೯ ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಎಲ್ಲ ವಲಯಗಳ ಯೂನಿಯನ್ ಗಳ ಕಾರ್ಮಿಕರು ಇದರಲ್ಲಿ ಭಾಗವಹಿಸಿ ಸಾರ್ವತ್ರಿಕ ಸಾರ್ವತ್ರಿಕ ಮುಷ್ಕರವನ್ನು ಕರ್ನಾಟಕದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ೨೯ ರಂದು ಪ್ರತಿಭಟನೆ ಜರುಗಲಿದ್ದು ಇಲ್ಲಿನ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವದು ಎಂದರು.
ಎಐಯುಟಿಯುಸಿಯ ರಾಜ್ಯ ಉಪಾಧ್ಯಕ್ಷೆ ಡಿ. ನಾಗಲಕ್ಷ್ಮಿ ಮಾತನಾಡಿ,
ಕೊರೊನಾದಿಂದ ಸಾಕಷ್ಟು ಜನರು ತೊಂದರೆಗೀಡಾಗಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕರಾಳ ಮಸೂದೆಗಳು, ಸುಗ್ರೀವಾಜ್ಞೆಗಳು ಹಾಗೂ ನೀತಿಗಳ ಮೂಲಕ ಕಾರ್ಮಿಕರು ಹೋರಾಟಗಳ ಮೂಲಕ ಗಳಿಸಿರುವ ಹಲವಾರು ಹಕ್ಕುಗಳನ್ನು ಕಿತ್ತುಕೊಂಡಿವೆ ಅಲ್ಲದೇ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದರಿಂದ ಮುಷ್ಕರಕ್ಕೆ ಕರೆ ನೀಡಿದ್ದು, ಆಶಾ ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ನೌಕರರು ಮತ್ತು ಸ್ಕೀಮ್ ಸರ್ಕಾರಗಳ ಹಾಗೂ ದಿನಗೂಲಿ ನೌಕರರು, ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕುಟುಂಬಗಳ ಜನರು ತೀವ್ರ ಸಂಕಷ್ಟದಲ್ಲಿದೆ. ಉದ್ಯಮ ಹಾಗೂ ನೇಮಕಾತಿಗಳಿಗೆ ತಡೆಯಾಜ್ಞೆ, ಅವಧಿಗೆ ಮುಂಚೆಯೇ ಒತ್ತಾಯದ ನಿವೃತ್ತಿ, ಇತ್ಯಾದಿ ಕಾರಣಗಳಿಂದ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ ಎಂದರು.
ಕಾರ್ಮಿಕರಿಗೆ ದುಡಿಮೆಗೆ ತಕ್ಕ ಸಂಬಳವಿಲ್ಲ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಬೆಂಬಲ ನೀಡಿಲ್ಲ ಎಂದು ಆರೋಪಿಸಿದರು.
ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಯಾವುದೇ ರೂಪದಲ್ಲಿ ಖಾಸಗೀಕರಣ ಬೇಢ ಮತ್ತು ಎನ್.ಪಿ.ಎಂ ನ್ನು ರದ್ದು ಮಾಡಬೇಕು, ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ ೭೫೦೦ ಗಳ ಆಹಾರ ಮತ್ತು ಆದಾಯ ಬೆಂಬಲ ನೀಡಬೇಕು, ನರೇಗಾ ಯೋಜನೆಯಡಿ ಹೆಚ್ಚಿನ ಅನುದಾನ ನೀಡಿ ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಬೇಕು, ಗುತ್ತಿಗೆ ಹೊರಗುತ್ತಿಗೆ ಸೇರಿದಂತೆ ಎಲ್ಲಾ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಜೀವನ ಯೋಗ್ಯ ವೇತನ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆ, ಅಂಗನವಾಡಿ ಆಶಾ, ಬಿಸಿಯೂಟ ಮತ್ತು ಇತರ ಸ್ಕೀಮ್ ವರ್ಕರ್ ಗಳಿಗೆ ಶಾಸನ ಬದ್ದ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಮುಂತಾದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಭುವನ, ಸುಜಾತಾ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ರಮೇಶ ಹೊಸಮನಿ, ಆಶಾ ಕಾರ್ಯಕರ್ತಯರಾದ ರಾಜೇಶ್ವರಿ ಹಿರೇಮಠ, ಶೋಭಾ ದೊಡ್ಡಮನಿ, ಉಮಾ ಅಳಗವಾಡಿ ಸೇರಿದಂತೆ ಉಪಸ್ಥಿತರಿದ್ದರು.