ಹುಬ್ಬಳ್ಳಿ : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸಪ್ಟೆಂಬರ್ 15 ರೊಳಗೆ ಪ್ರವರ್ಗ 2ಎ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಾಗೂ ಆಗಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಯಿ ಕಳೆದ ಅಧಿವೇಶನದಲ್ಲಿಯೇ ಭರವಸೆ ನೀಡಿದ್ದರು. ಇದೀಗ ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿ ಆಗಿದ್ದು, ಕೂಡಲೇ ಸಮುದಾಯಕ್ಕೆ 2ಎ ಮೀಸಲಾತಿಗೆ ಶಿಫಾರಸು ಮಾಡಬೇಕೆಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ನಗರದ ಖಾಸಗಿ ಹೊಟೆಲ್ ನಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಚಳುವಳಿಗಾರರ ಮಹತ್ವದ ದುಂಡುಮೇಜಿನ ಸಭೆಯ ಬಳಿಕ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈ ಹಿಂದೆ ಸರ್ಕಾರ ಆರು ತಿಂಗಳ ಸಮಯ ಕೇಳಿದ್ದರು. ಆ ಗಡಿವು ಸೆ.15ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ನೂತನ ಸಿಎಂ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2ಎ ಹಾಗೂ ಲಿಂಗಾಯತ ಸಮುದಾಯಗಳಿಗೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಶಿಫಾರಸು ಮಾಡಿ ಸರ್ಕಾರ ನುಡಿದಂತೆ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಒತ್ತಡ ಹಾಕುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ದುಂಡು ಮೇಜಿನ ಸಭೆ ನಡೆಸಲಾಗಿದೆ. ಸಭೆ ಯಶಸ್ವಿಗೊಂಡಿದ್ದು ಪ್ರಮುಖ ಐದು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಸರ್ಕಾರ ಸೆ.15ರ ಒಳಗೆ ಬೇಡಿಕೆ ಈಡೇರದಿದ್ದರೆ ಅ.1ರಿಂದ ಧರಣಿ ಸತ್ಯಾಗ್ರಹ ಮತ್ತೆ ಮುಂದುವರಿಯಲಿದೆ. ‘‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್’’ ಧ್ಯೇಯವಾಕ್ಯದಡಿ ಇಷ್ಟಲಿಂಗ ಪೂಜೆ ಮೂಲಕ ಜನಜಾಗೃತಿ ಹಮ್ಮಿಕೊಳ್ಳಲಾಗಿದೆ. ಇದು ಬೀದರ್ನಿಂದ ಮಲೆಮಹದೇಶ್ವರ ಬೆಟ್ಟದವರೆಗೆ ನಡೆಯಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ವಿಜಯನಂದ ಕಾಶಪ್ಪನವರ ಮಾತನಾಡಿ, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಸವಿದೆ. ಸರ್ಕಾರ ಪಂಚಮಸಾಲಿ ಸಮೂದಾಯಕ್ಕೆ ಮೀಸಲಾತಿ ಕೊಟ್ಟು ತಮ್ಮ ಮಾತು ಉಳಿಸಿಕೊಳ್ಳುತ್ತಾರೆಂದು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ. ಮೀಸಲಾತಿ ಆಗ್ರಹಿಸಿ ಈಗಾಗಲೇ 10 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡಲಾಗಿದೆ. ಮುಂದೆ 20 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ, ಬಸವರಾಜ ಭೂತೆ, ಗಣೇಶ ಪಾಟೀಲ, ದಿನೇಶ ಪಾಟೀಲ, ವೀರೇಶ ಉಂಡಿ ಸೇರಿದಂತೆ ಮುಂತಾದವರು ಇದ್ದರು.