ಹುಬ್ಬಳ್ಳಿ : ಸರ್ವೋಚ್ಚ ನ್ಯಾಯಾಲಯ ಶಾಲಾ ಕಟ್ಟಡಗಳಿಗೆ ಲೋಕೋಪಯೋಗಿ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯವುದನ್ನು ಕಡ್ಡಾಯಗೊಳಿಸಿ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಿ ಕಾರ್ಯಗತಗೊಳಿಸಬೇಕು. ಆದರೆ ತೀರ್ಪಿನ ಅನುಷ್ಠಾನದ ವೇಳೆ ಆಗಮಿಸುವ ತೊಂದರೆಗಳನ್ನು ಸರಿಪಡಿಸಬೇಕಿದೆ. ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಬೇಕು. ಶಾಲಾ ಕಟ್ಟಡಗಳನ್ನು ವಲಯವಾರು ಎ ಬಿ ಸಿ ಮಾದರಿಯಲ್ಲಿ ವಿಭಾಗಿಸಿ ಸ್ಥಿರತೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ನೀಡುವಂತಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ನಲ್ಲಿ ಶಾಲಾ ಕಟ್ಟಡ ಹಾಗೂ ಅಗ್ನಿ ಸುರಕ್ಷಿತ ನಿಯಮಗಳ ಪರಿಶೀಲನಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪು ಅನುಷ್ಠಾನ ಮಾಡಲು ಸರ್ಕಾರ ಮಟ್ಟದಲ್ಲಿ ಕೈಗೊಳ್ಳಬೇಕಾದ ಬದಲಾವಣೆಗಳ ಬಗ್ಗೆ ವಿವರಗಳನ್ನು ನೀಡಿ. ಶಾಲಾ ಮಕ್ಕಳ ಸುರಕ್ಷಿತಯ ವಿಚಾರದಲ್ಲಿ ರಾಜಿಯಲ್ಲ. ಹಾಗೆಯೇ ನಿಯಮಗಳನ್ನು ಅನುಷ್ಠಾನವು ನ್ಯಾಯಬದ್ದವಾಗಿರಬೇಕು. ರಾಜ್ಯದಲ್ಲಿ ಬಹು ಮಹಡಿಯ ಶಾಲಾ ಕಟ್ಟಡಗಳು ಇರುವುದು ಕಮ್ಮಿ. ಸಿಮೆಂಟ್ ನಿಂದ ಕಟ್ಟಿದ ಕಟ್ಟಡಗಳು ಕಡಿಮೆ ಅಗ್ನಿ ದುರಂತ ಹೊಂದುವ ಅವಕಾಶವಿದೆ. ಕಟ್ಟಿಗೆ ಹಾಗೂ ಹಂಚಿನ ಶಾಲೆಗಳಲ್ಲಿ ಅಗ್ನಿ ಶಾಮಕ ನಿಯಮಗಳು ಪಾಲನೆಯಾಗಬೇಕು. ಅಧಿಕಾರಿಗಳು ಮಲೆನಾಡು ಕರವಾಳಿ ಭಾಗದಲ್ಲಿನ ಶಾಲೆಗಳ ಸ್ಥಿತಿಗತಿಗಳನ್ನು ಅವಲೋಕಿಸಿ ವರದಿ ನೀಡಿ. ಈ ವಿಚಾರವಾಗಿ ಶಿಕ್ಷಣ, ಕಾನೂನು, ಅಗ್ನಿಶಾಮಕ ಹಾಗೂ ಲೋಕೋಪಯೋಗಿ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸುತ್ತೇನೆ. ವಿಧಾನ ಪರಿಷತ್ ಕಲಾಪದಲ್ಲೂ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವಿ.ಎಸ್.ಸಂಕನೂರ, ಮದ್ರಾಸ್ ಹತ್ತಿರದ ಕುಂಬುಕೋಣಂನ ಲಾರ್ಡ್ ಕೃಷ್ಣಾ ಶಾಲೆಯ ಬೆಂಕಿ ದುರಂತದಲ್ಲಿ 94 ಮಕ್ಕಳು ಮೃತದಾರು. 136 ಮಕ್ಕಳು ಗಂಭೀರವಾಗಿ ಗಾಯಗೊಂಡರು. ಈ ಹಿನ್ನಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಶಾಲಾ ಸುರಕ್ಷತಾ ಕ್ರಮಗಳ ಕುರಿತಾಗಿ ಎರೆಡು ಬಾರಿ ತೀರ್ಪನ್ನು ನೀಡಿದೆ. ಇದನ್ನು ಆಧರಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದೇಶದ ಎಲ್ಲಾ ಶಾಲೆಗಳು ಅಗ್ನಿಶಾಮಕ ಹಾಗೂ ಕಟ್ಟಡ ಸ್ಥಿರತೆ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ.
ಧಾರವಾಡದಲ್ಲಿ ಜರುಗಿದ ಸಭೆಯಲ್ಲಿ ಕಲಬುರ್ಗಿ ಹಾಗೂ ಬೆಳಗಾವಿ ವಿಭಾಗದ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಲೆಹಗಳನ್ನು ನೀಡಿ, ಅಹವಾಲುಗಳನ್ನು ಸಲ್ಲಿಸಿದ್ದಾರೆ. ಖಾಸಗಿ ಹಾಗೂ ಗ್ರಾಮಾಂತರ ಪ್ರದೇಶದ ಶಿಕ್ಷಣ ಸಂಸ್ಥೆಗಳಿಗೆ ಜೀವ ತುಂಬುವ ಕಳಕಳಿಯೊಂದಿಗೆ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳ ಅಗತ್ಯತೆ ಕುರಿತು ಸರಳೀಕೃತ ಪರಿಹಾರ ಕಂಡುಕೊಂಡು, ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲಾಗುವುದು. ತ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯನ್ನು ವಿಕೇಂದ್ರಿಕರಣ ಮಾಡಲಾಗುವುದು. ಅಗ್ನಿ ಶಾಮಕ ಇಲಾಖೆಯಿಂದ ಪರಿಶೀಲನೆ ಹಾಗೂ ಪ್ರಮಾಣ ಪತ್ರ ನೀಡುವ ನಿಗದಿ ಮಾಡಿರುವ ಶುಲ್ಕದ ರದ್ದತಿ ಅಥವಾ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ, ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಶಿವಯೋಗಿ ಹಿರೇಮಠ, ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿ ಶ್ರೀಕಾಂತ, ಗೃಹ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಪಂಪನಗೌಡ ಸೇರಿದಂತೆ ಸಾರ್ವಜನಿಕ ಶಿಕ್ಷಣ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.