ಹುಬ್ಬಳ್ಳಿ : ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಯಾವುದೇ ಸಂದರ್ಭದಲ್ಲಿ ಬಂದರು ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ದ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಮಹಾನಗರದ ಜನರು ಸಾಂಪ್ರದಾಯಿಕ ಪಕ್ಷಗಳ ಅಧಿಕಾರ ನೋಡಿ ಬೇಸತ್ತು ಹೋಗಿದ್ದು, ಪರ್ಯಾಯ ಪ್ರಬಲ ಪಕ್ಷಕ್ಕಾಗಿ ಕಾಯತ್ತಾ ಇದ್ದಾರೆ. ಆ ಸ್ಥಾನವನ್ನು ಆಮ್ ಆದ್ಮಿ ಪಕ್ಷ ಮಾಡಲಿದ್ದು, ಈಗಾಗಲೇ 82 ವಾರ್ಡ್ ಗಳಲ್ಲೂ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಜನರಿಗೆ ಉತ್ತಮ, ಸದೃಢ ನಾಯಕನನ್ನು ಚುನಾವಣೆಗೆ ನಿಲ್ಲಿಸಿ ಗೆಲುವು ಸಾಧಿಸಿ ನಗರವನ್ನು ವಿಶ್ವದರ್ಜೆಯ ಮಹಾನಗರ ಮಾಡಲಾಗುವುದು ಎಂದರು.
ರಾಜ್ಯ ಸಂಚಾಲಕ ರೋಮಿ ಬಾಟಿ ಮಾತನಾಡಿ, ಆಮ್ ಆದ್ಮಿ ಪಕ್ಷ ಈಗಾಗಲೇ ದೆಹಲಿಯಲ್ಲಿ ಸುವ್ಯವಸ್ಥಿತ ಆಡಳಿತ ನೀಡಿ ಜನರ ಮನಸ್ಸು ಗೆದ್ದಿದೆ, ಅಲ್ಲದೇ ಶಿಕ್ಷಣ, ಆರೋಗ್ಯದಲ್ಲಿ ಕ್ರಾಂತಿ ಮಾಡಿ ಜಗತ್ತಿಗೆ ಮಾದರಿಯಾಗಿದೆ. ಅದೇ ರೀತಿ ಹು-ಧಾ ಅವಳಿ ನಗರದಲ್ಲಿ ಆಡಳಿತ ನೀಡಲು ಸಿದ್ದಗೊಂಡಿದ್ದು, ಇದನ್ನು ಬರುವ ಪಾಲಿಕೆ ಚುನಾವಣೆ ಮೂಲಕ ನೆನಸು ಮಾಡಲಾಗುವುದು ಎಂದರು.
ಜಿಲ್ಲಾ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಮುಂಬರುವ ಪಾಲಿಕೆ ಚುನಾವಣೆಗೆ ಈಗಾಗಲೇ ಆನ್ಲೈನ್ ಮೂಲಕ 200 ಕ್ಕೂ ಹೆಚ್ಚು ಅರ್ಜಿ ಬಂದಿದ್ದು, ನೇರವಾಗಿ ವಾರ್ಡ್ ವೀಕ್ಷಕರ ಮೂಲಕ ಪ್ರತಿ ವಾರ್ಡ್ ನಲ್ಲಿ 5 ರಿಂದ 10 ಜನರು ಅಭ್ಯರ್ಥಿಗಳಾಗಲು ಸಿದ್ದಗೊಂಡಿದ್ದಾರೆ. ಹೀಗಾಗಿ ರಾಜ್ಯ ನಾಯಕರು ಈ ಪಟ್ಟಿಯನ್ನು ಪರಿಶೀಲನೆ ನಡೆಸಿ 82 ವಾರ್ಡ್ ಗಳಿಗೆ ಅತ್ಯುತ್ತಮ ಅಭ್ಯರ್ಥಿಗಳನ್ನು ತಿರ್ಮಾಣ ಮಾಡುವರು. ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಎಲ್ಲ ವಾರ್ಡ್ ಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದ್ದು, ಆಮ್ ಆದ್ಮಿ ಪಕ್ಷಕ್ಕೆ ಈ ಚುನಾವಣೆ ಐತಿಹಾಸಿಕ ಚುನಾವಣೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹ ಸಂಚಾಲಕರು ಶಾಂತಲಾ ದಾಮ್ಲೆ, ಬಸವರಾಜ ಮುದ್ದಿಗೌಡರು, ದರ್ಶನ ಜೈನ್ ಸೇರಿದಂತೆ ಮುಂತಾದವರು ಇದ್ದರು.