ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಸುಮ್ಮನೆ ಹವಾ ಬೀಡುತ್ತಾರೆ. ಬಿಟ್ ಕಾಯಿನ್ ಪ್ರಕರಣದಿಂದ ಸಿಎಂ ಬದಲಾವಣೆ ಆಗುವುದಿಲ್ಲ. ಈಗಾಗಲೇ ಬಿಟ್ ಕಾಯಿನ್ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಅದರಲ್ಲಿ ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಆದರೆ ಇದೇ ವಿಚಾರಕ್ಕೆ ಸಿಎಂ ಬದಲಾವಣೆ ಆಗಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ಧಾರವಾಡದ ಮನಗುಂಡಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಚರ್ಚೆಗಳು ಮಾಡಿ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಈಗಾಗಲೇ ಈ ಪ್ರಕರಣದ ತನಿಖೆಯನ್ನು ಹಲವರು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ನಮ್ಮಗೆ ತಿಳಿದ ಮಟ್ಟಿಗೆ ಸಿಎಂ ಬದಲಾಗುವುದಿಲ್ಲ. ಇತ್ತೀಚೆಗೆ ಅವರು ಸಿಎಂ ಆಗಿ, ಕೆಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಅವರು ಹಾಗೇ ಮುಂದುವರೆಯಲಿ ಅನ್ನುವಯದು ನಮ್ಮ ಆಶಯವಾಗಿದೆ ಎಂದರು.
*ಈ ಬಾರಿಯ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿಯೇ ನಡೆಯುತ್ತದೆ.*
ಈಗಾಗಲೇ ಡಿಸೆಂಬರ್ 13 ರಂದು ಚಳಿಗಾಲ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸುವುದರ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನ ಮುಂದಕ್ಕೆ ಹಾಕುವುದಕ್ಕೆ ಬರುವುದಿಲ್ಲ. ಹಾಗಾಗಿ ಇದರ ಕುರಿತು ಯಾವುದೇ ಅನುಮಾನ ಬೇಡ. ಉತ್ತರ ಕರ್ನಾಟಕ ಭಾಗದವರೇ ಸಿಎಂ, ಸಭಾಪತಿ ಹಾಗೂ ಸಭಾಧ್ಯಕ್ಷರು ಇದ್ದಾರೆ. ಅಲ್ಲದೆ ಕಳೆದ 2018 ರಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆದಿತ್ತು. ಈಗ ಮೂರು ವರ್ಷಗಳು ಕಳೆಯುತ್ತಾ ಬಂದಿದೆ. ಹಾಗಾಗಿ ಈ ಬಾರಿ ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ಚಳಿಗಾಲ ಅಧಿವೇಶ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದಸನಲ್ಲಿ ಅಭಿವೃದ್ಧಿಗಿಂತ ಗದ್ದಲ ಗಲಾಟೆಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆ, ಅದಕ್ಕೆ ಕಡವಾಣ ಹಾಕುವ ನಿಟ್ಟಿನಲ್ಲಿ ಒಂದು ಲೇಖನವನ್ನು ಸಿದ್ಧಪಡಿಸಿದ್ದೇನೆ. ಅದನ್ನು ಬರುವ 17,18 ಹಾಗೂ 19ರಂದು ಶೀಮ್ಲಾದಲ್ಲಿ ನಡೆಯುವ ಆಲ್ ಇಂಡಿಯಾ ಸ್ಪೀಕರ್ಸ್ ಸಭೆಯಲ್ಲಿ ಮಂಡಿಸುತ್ತೇನೆ. ಅದಕ್ಕೆ ಅನುಮೋದನೆ ಪಡೆದುಕೊಂಡು, ನಮ್ಮ ಸದನದಲ್ಲಿ ಗದ್ದಲ ಗಲಾಟೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಜನಪರ ಕಾರ್ಯಗಳ ಚರ್ಚೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.