ಹುಬ್ಬಳ್ಳಿ : ಹಳೇಹುಬ್ಬಳ್ಳಿ ಗಲಾಟೆಗೆ ಸಂಬಂಧಿಸಿದಂತೆ
ಪೊಲೀಸರು ನಡೆಸುವ ತನಿಖೆಗೆ ಯಾರು ಹಸ್ತಕ್ಷೇಪ ಮಾಡಬಾರದು. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಕೈಗೊಳ್ಳುವ ತನಿಖೆಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ. ಅಲ್ಲದೇ ಜನರಿಗೂ ಕೂಡಾ ತಿಳುವಳಿಕೆ ನೀಡುತ್ತೇವೆ. ಆದರೆ ಕಾನೂನು ಕೈಗೆತ್ತಿಕೊಂಡವರಿಗೆ ರಕ್ಷಣೆ ಕೊಡುವುದಿಲ್ಲ ಎಂದು ಹೇಳಿದರು.
ಹಸ್ತಕ್ಷೇಪ ಬೇಡ: ಘಟನೆಯ ತನಿಖೆಯಲ್ಲಿ ಯಾರು ಹಸ್ತಕ್ಷೇಪ ಮ ಮಾಡಲು ಮಾಡಬಾರದೆಂದು ಸಲಹೆ ನೀಡಿದ ಡಿ.ಕೆ.ಶಿವಕುಮಾರ್ ಅಶಾಂತಿ ಮೂಡಿಸಲು ಪ್ರಚೋದನೆ ಮಾಡಬಾರದು. ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಶಾಂತಿಯನ್ನು ಬಯಸುತ್ತದೆ. ಉದ್ಯೋಗ ಹೆಚ್ಚಬೇಕೆಂದು ಆಶಿಸುತ್ತದೆ ಎಂದು ಹೇಳಿದರು.
ಈಗಲೇ ನಿರುದ್ಯೋಗ ಹೆಚ್ಚಿದೆ. ಮುಂದೆ ಇನ್ನೂ ಹೆಚ್ಚಾಗುವ ಆತಂಕ ಇದೆ. ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಂತಹ ಮಹಾನಗರದಲ್ಲಿ ಅಶಾಂತಿ ಮೂಡಿಸುವುದರಿಂದ ನಿರುದ್ಯೋಗ ಮತ್ತಷ್ಟು ಹೆಚ್ಚುತ್ತದೆ. ಇದರಿಂದ ಎಲ್ಲ ಧರ್ಮದ ಯುವಕರು ಭಾವನಾತ್ಮಕವಾಗಿ ಪ್ರಚೋದನೆಗೆ ಒಳಗಾಗಿ ದುಕೃತ್ಯದಲ್ಲಿ ತೊಡಗಿಕೊಳ್ಳುವ ಅಪಾಯ ಇರುತ್ತದೆ. ಹಾಗಾಗಿ ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಯಲು ಎಲ್ಲರೂ ಶ್ರಮಿಸಬೇಕು ಎಂದರು.
ಪೋಲಿಸ್ ಕಾರ್ಯಕ್ಕೆ ಮೆಚ್ಚುಗೆ: ಗಲಾಟೆಯನ್ನು ಎರಡು ಗಂಟೆಯಲ್ಲಿ ಹತೋಟಿಗೆ ತರಲು ಪೊಲೀಸರು ತೀವ್ರ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸದ್ಯ ಶಾಂತಿ ನೆಲೆಸಿದೆ. ಅದರ ಕಾರ್ಯವನ್ನು ಮೆಚ್ಚುತ್ತೇನೆ. ಒಂದು ಪೋಸ್ಟ್ ನಿಂದ ಆಗಿರುವ ಗಲಾಟೆ ಮತ್ತು ಕಾನೂನು ಕೈಗೆ ತೆಗೆದುಕೊಂಡಿದ್ದನು ಕಾಂಗ್ರೆಸ್ ಖಂಡಿಸುತ್ತದೆ. ತಪ್ಪು ಮಾಡಿದವರ ವಿರುದ್ಧ ಪೋಲಿಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಿ ಆದರೆ ಅಮಾಯಕರಿಗೆ ತೊಂದರೆಯಾಗದಂತೆ ಹಾಗೂ ಅಂತವರ ವಿರುದ್ಧ ಕೇಸ್ ಹಾಕುವುದನ್ನು ಪೋಲಿಸರು ಕೈಬಿಡಬೇಕೆಂದು ಆಗ್ರಹಿಸಿದರು.
ಚರ್ಚ್ ಗಳಿಗೆ ಹೋಗಿ ಪೂಜೆ ಮಾಡಿದವರ ಹಾಗೂ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳ ಮೇಲೆ, ವ್ಯಾಪಾರ ಮಾಡಿದ ಒಂದು ಧರ್ಮದವರ ಮೇಲೆ ಹಲ್ಲೇ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಜಾತ್ರೆಗಳಲ್ಲಿ ಸೀಮಿತ ಧರ್ಮದ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಹೇಳುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.