ಹುಬ್ಬಳ್ಳಿ : ದೇಶದಲ್ಲಿ ನಗರಗಳ ಬೆಳವಣಿಗೆ ತ್ರೀವ್ರಗತಿಯಲ್ಲಿದೆ. ಪ್ರಸ್ತುತ 50:50 ಅನುಪಾತದ ಹಂಚಿಕೆಯಲ್ಲಿ ಜನರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ನಗರಗಳ ಕಡೆ ವಲಸೆ ಬರುವವರ ಪ್ರಮಾಣವು ಹೆಚ್ಚಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು 2047 ರಲ್ಲಿ ಭಾರತ ಹೇಗಿರಬೇಕು? ಎಂಬ ಕಲ್ಪನೆಯನ್ನು ರೂಪಿಸಿದ್ದಾರೆ. ಇದರಂತೆ ಭವಿಷ್ಯದ ಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ನಗರಗಳ ವಿನ್ಯಾಸದ ರಚನೆಯಾಗಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನವನಗರದಲ್ಲಿನ ಹುಡಾ ಕಚೇರಿ ಆವರಣದಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾದ ತಡಸಿನಕೊಪ್ಪ ಗ್ರಾಮದ ರಿ.ಸ.ನಂ 41 ರಿಂದ 50 ಕ್ಷೇತ್ರದಲ್ಲಿನ 786 ನಿವೇಶನ ಹಕ್ಕು ಪತ್ರಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ನೂತನ ಅಧ್ಯಕ್ಷರು ಕ್ರಿಯಾಶೀಲವಾಗಿ ಕೆಲಸ ಮಾಡುವುದರೊಂದಿಗೆ ಹೊಸ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಚೆನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣದಲ್ಲಿ ಜನಪ್ರತಿನಿಧಿಗಳಿಗೆ ಯಾವುದೇ ಪ್ರತಿಷ್ಠೆ ಇಲ್ಲ. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಆಕ್ಷೇಪಣೆಗಳನ್ನು ಗಮನದಲ್ಲಿ ಇರಿಸಿ ಯೋಜನೆಯ ಬಗ್ಗೆ ಸಂಪೂರ್ಣ ಅಧ್ಯಯನ ನೆಡೆಸಿ ವರದಿ ನೀಡಲು ತಜ್ಞರ ಸಮಿತಿ ನೇಮಿಸಲಾಗಿದೆ. ಐ.ಐ.ಟಿ. ಬಿ.ವ್ಹಿ.ಬಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿನ ಇಂಜಿನಿಯರ್ಸ್, ಖಾಸಗಿ ನಿಮಾತೃಗಳು ಸಮಿತಿಯಲ್ಲಿ ಇದ್ದು ವಾರದಲ್ಲಿ ವರದಿ ನೀಡಲಿದ್ದಾರೆ. ನಂತರ ಸಾದಕ ಬಾದಕಗಳನ್ನು ಚರ್ಚಿಸಲಾಗುವುದು ಎಂದರು.
ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಾಧಿಕಾರದಿಂದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ. ಅವಳಿ ನಗರದಲ್ಲಿ ಗ್ಯಾಸ್ ಹಾಗೂ ಕುಡಿಯುವ ನೀರು ಪೈಪ್ ಲೈನ್ ಅವಳವಡಿಕೆ ಕಾರ್ಯ ಮುಂದುವರಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ತಡಿಸಿನಕೊಪ್ಪ ಹಾಗೂ ಲೋಕಪ್ಪನಹಕ್ಕಲಿನಲ್ಲಿನ 786 ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ. ಒಟ್ಟು 3700 ಜನರು ಅರ್ಜಿ ಸಲ್ಲಿಸಿದ್ದರು. ಪ್ರಾಧಿಕಾರದಿಂದ 3 ಬಾರಿ ಮೂಲೆ ನಿವೇಶನಗಳನ್ನು ಹರಾಜು ಮಾಡಲಾಗಿದೆ. 357 ನಾಗರಿಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಅವುಗಳ ಬಳಕೆ ಕುರಿತು ಸರ್ವೇ ಮಾಡಲಾಗಿದೆ. ಸದ್ಯ 83 ನಾಗರಿಕ ಸೌಲಭ್ಯದ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಪ್ರಾಧಿಕಾರದ ವತಿಯಿಂದ ಕೆರೆ ಸಂರಕ್ಷಣೆಗೂ ಒತ್ತು ನೀಡಲಾಗಿದೆ. ರೈತರ ಜಮೀನುಗಳನ್ನು ಪಡೆದು ಅಭಿವೃದ್ಧಿ ಪಡಿಸಿ 60:40 ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ ಲಕ್ಕಮ್ಮನಹಳ್ಳಿ ಹಾಗೂ ತಡಸಿನಕೊಪ್ಪದಲ್ಲಿ ಅಭಿವೃದ್ಧಿ ಪಡಿಸಿದ ಬಡಾವಣೆಗಳಿಗೆ ನರೇಂದ್ರ ಮೋದಿ ಹೆಸರಿಡಬೇಕು. ವಾರ್ಷಿಕವಾಗಿ 5 ರಿಂದ 10 ಸಾವಿರ ನಿವೇಶನಗಳನ್ನು ಮಧ್ಯಮ ವರ್ಗದ ಜನರಿಗೆ ನಿವೇಶನಗಳನ್ನು ಹುಡಾ ವತಿಯಿಂದ ಹಂಚಿಕೆ ಮಾಡಬೇಕು. ನಗರದಲ್ಲಿ 150 ಕೋಟಿ ವೆಚ್ಚದಲ್ಲಿ ಮುಖ್ಯ ಒಳಚರಂಡಿ ವ್ಯವಸ್ಥೆ ನಿರ್ಮಿಸಲಾಗಿದೆ. ಇದಕ್ಕೆ ಹೊಸದಾಗಿ ನಿರ್ಮಿಸುವ ಬಡಾವಣೆಗಳ ಯುಜಿಡಿ ಸಂಪರ್ಕ ಹೊಂದಿಸಬೇಕು. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಶೀಘ್ರವಾಗಿ ರಿಂಗ್ ರೋಡ್ ಲೋಕಾರ್ಪಣೆ ಮಾಡಲಾಗುವುದು ಎಂದರು.
ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರದೀಪ್ ಶೆಟ್ಟರ್, ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಸೇರಿದಂತೆ ಹುಡಾ ಸದಸ್ಯರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.