ಹುಬ್ಬಳ್ಳಿ ನೃಪತುಂಗಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮತ್ತು ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಸೆರೆ ಹಿಡಿಯಲಾಗಿದ್ದ ಚಿರತೆ ಒಂದೇ ಆಗಿದೆ ಎಂದು ಇಂದು ಬಂದಿರುವ ಡಿಎನ್ಎ ವರದಿಯಲ್ಲಿ ದೃಡಪಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಚಿರತೆ ಆರಂಭದಲ್ಲಿ ಹುಬ್ಬಳ್ಳಿ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೆಕಟ್ಟಡದಲ್ಲಿ ವಾಸವಾಗಿತ್ತು. ನಂತರ ಅದು ಬಹುಶಃ ಅಮರಗೋಳ, ಗೋವನಕೋಪ್ಪ ಮಾರ್ಗವಾಗಿ ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳಿಗೆ ಹೊಗಿರುವ ಕುರಿತು ಅಭಿಪ್ರಾಯ ಪಡಲಾಗಿತ್ತು.
ಅದರಂತೆ ಎರಡು ಚಿರತೆ ಒಂದೇ ಅಥವಾ ಬೇರೆ ಬೇರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಎರಡುಕಡೆಯಲ್ಲಿ ಸಂಗ್ರಹಿಸಲಾಗಿದ್ದ ಚಿರತೆ
ಲದ್ದಿ (ಮಲ)ಯನ್ನು ಡಿಎನ್ಎ ಪರೀಕ್ಷೆಗಾಗಿ ಹೈದ್ರಾಬಾದ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ಅದರ ವರದಿ ಇಂದು ಅರಣ್ಯ ಇಲಾಖೆಗೆ ತಲುಪಿದ್ದು, ಎರಡು ಕಡೆ ಕಂಡುಬಂದಿದ್ದ ಚಿರತೆ ಒಂದೆ ಆಗಿದೆ ಎಂದು ಡಿಎಪ್ಓ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.