ಹುಬ್ಬಳ್ಳಿ : ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಕೈಗಾರಿಕೆಗಳು ಜನರ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ್ದರು. ಅದರಂತೆ ದೇಶದ ಕೈಗಾರಿಕೋದ್ಯಮಿಗಳು ಕೋವಿಡ್ ನಿರ್ವಹಣೆಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ವೇದಾಂತ ಸಂಸ್ಥೆ ಅತಿ ಕಡಿಮೆ ಸಮಯದಲ್ಲಿ ಕರ್ನಾಟಕದಲ್ಲಿ ಎರೆಡು ಕೋವಿಡ್ ಆಸ್ಪತ್ರೆಗಳನ್ನು ತೆರೆದು ಜನರಿಗೆ ನೆರವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇಂದು ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ
ವೇದಾಂತ ಸಂಸ್ಥೆ ನಿರ್ಮಿಸಿರುವ 100 ಬೆಡ್ಗಳ ಕೋವಿಡ್ ಫೀಲ್ಡ್ ಆಸ್ಪತ್ರೆ ಉದ್ಘಾಟಸಿ ಅವರು ಮಾತನಾಡಿದರು.
ವೇದಾಂತ ಸಂಸ್ಥೆಯ ಅನಿಲ್ ಅಗರವಾಲ್ ಕೇಂದ್ರ ಸರ್ಕಾರದ ಕೋರಿಕೆ ಮನ್ನಿಸಿ ರಾಜ್ಯದ ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಿಸಿದ್ದಾರೆ. ಅವರಿಗೆ ಧನ್ಯವಾದಗಳು. ಹುಬ್ಬಳ್ಳಿ ಆಸ್ಪತ್ರೆ 20 ಐಸಿಯು ಮತ್ತು 80 ಆಕ್ಸಿಜನ್ ಬೆಡ್ಗಳನ್ನು ಹೊಂದಿದೆ. ಆಸ್ಪತ್ರೆ ನಿರ್ವಹಣೆ ಕೂಡ ವೇದಾಂತ ಸಂಸ್ಥೆ ನಿರ್ವಹಿಸುತ್ತಿದೆ. ಕಿಮ್ಸ್ನಿಂದ ವೈದ್ಯರನ್ನು ನೇಮಿಸಲಾಗುವುದು. ಆಸ್ಪತ್ರೆ 10 ವರ್ಷಗಳು ಬಾಳಿಕೆ ಬರಲಿದೆ ಎಂದರು.
ಕೋವಿಡ್ ಎರಡನೇ ಅಲೆ ಬಹಳಷ್ಟು ಆಂತಕ ಉಂಟುಮಾಡಿದೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪ್ರಧಾನಿಯವರು ಹಲವಾರು ಮಂತ್ರಿಗಳ ನೇತೃತ್ವದಲ್ಲಿ ಕೋವಿಡ್ ನಿರ್ವಹಣೆಗೆ ಸಮಿತಿ ನೇಮಿಸಿದ್ದರು. ಅದರಲ್ಲಿ ನಾನು ಕೂಡ ಸಕ್ರಿಯವಾಗಿ ಕೆಲಸ ನಿರ್ವಹಿಸಿದ್ದೇನೆ. ಸರ್ಕಾರಕ್ಕೆ ಯಾವ ತಾಂತ್ರಿಕ ತಜ್ಞರ ಸಮಿತಿ ಕೋವಿಡ್ ಅಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬರಲಿದೆ. ಆಕ್ಸಿಜನ್ ಬೇಡಿಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಿರಲಿಲ್ಲ. ಕೋವಿಡ್ ಪೂರ್ವದಲ್ಲಿ ಆಮ್ಲಜನಕದ ಬೇಡಿಕೆ 900 ಟನ್ ಇತ್ತು.
ಏಪ್ರಿಲ್ ತಿಂಗಳ ಕೋವಿಡ್ ಆರಂಭದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಬೇಡಿಕೆ 9000 ಟನ್, ಇದು ಏಪ್ರಿಲ್ ಮಧ್ಯ ಭಾಗದಲ್ಲಿ 17000 ಟನ್ ಏರಿಕೆಯಾಯಿತು. ಕೆಲವೇ ದಿನಗಳ ಭಾರತದಲ್ಲಿ ಮೊದಲಿಗಿಂತಲೂ 10 ಪಟ್ಟು ಹೆಚ್ಚಿನ ಆಮ್ಲಜನಕ ಉತ್ಪಾದನೆ ಮಾಡಲಾಯಿತು. ಕ್ರಯೋಜನಿಕ್ ಕೊರತೆಯಿಂದ ಆಮ್ಲಜನಕದ ಸರಬಾರಜು ಅತಿ ದೊಡ್ಡ ಸಮಸ್ಯೆಯಾಗಿ ತಲೆದೊರಿತು. ದೇಶದಲ್ಲಿ 400 ಕ್ಕೂ ಹೆಚ್ಚು ರೈಲಿನ ಮೂಲಕ 28470 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ. ಕರ್ನಾಟಕಕ್ಕೆ 31 ಎಕ್ಸ್ಪ್ರೆಸ್ ರೈಲಿನ ಮೂಲಕ 3645 ಮೆಟ್ರಿಕ್ ಆಮ್ಲಜನಕ ಸರಬರಾಜು ಮಾಡಲಾಗಿದೆ. ಕೇಂದ್ರ ಸರ್ಕಾರ ಪಿ.ಎಂ.ಕೇರ್ ಮೂಲಕ ಆಮ್ಲಜನಕ ಘಟಕ ನಿರ್ಮಾಣಕ್ಕೆ ಅನುದಾನ ಒದಗಿಸಿದೆ. ಕೇಂದ್ರ ಸರ್ಕಾರದ ಅಡಿಯ ಉದ್ದಿಮೆಗಳಿಂದ ಕರ್ನಾಟಕ ರಾಜ್ಯದ 45 ಆಸ್ಪತ್ರೆಗಳಿಗೆ ಗಾಳಿಯಿಂದ ಆಮ್ಲಜನಕ ಉತ್ಪಾದನೆ ಮಾಡುವ ಘಟಕಗಳನ್ನು ನಿರ್ಮಿಸಲಾಗಿದೆ. ಇದು ಮುಂದಿನ ಕೋವಿಡ್ ಅಲೆ ಎದುರಿಸಲು ಅನುಕೂಲವಾಗಲಿದೆ ಎಂದರು.
135 ಕೋಟಿ ಜನಸಂಖ್ಯೆ ಭಾರತದಲ್ಲಿದೆ. ಜನಸಂಖ್ಯೆ ಅನುಗುಣವಾಗಿ ದೇಶದಲ್ಲಿ ಆರೋಗ್ಯ ಸೌಕರ್ಯಗಳು ನಿರ್ಮಾಣವಾಗಿಲ್ಲ. ಬೇರೆ ದೇಶಗಳಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಿದೆ. ಭಾರತದಲ್ಲಿ ಶೇಕಡವಾರು ಜನಸಂಖ್ಯೆ ಹೋಲಿಸಿದರೆ ಕೋವಿಡ್ ಲಸಿಕೆ ಪಡೆದುಕೊಂಡವರ ಪ್ರಮಾಣ ಕಡಿಮೆ ಅನಿಸುತ್ತದೆ. ಬ್ರಿಟನ್ ದೇಶದಲ್ಲಿ 7 ಕೋಟಿ ಜನಸಂಖ್ಯೆಯಿದೆ ಆದರೂ ಕೋವಿಡ್ ಲಸಿಕೆ ನೀಡುವಲ್ಲಿ ತೊಂದರೆಗಳಿವೆ. ಆರಂಭದಲ್ಲಿ ಹಲವು ರಾಜ್ಯದ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದಿಂದ ಕೋವಿಡ್ ಲಸಿಕೆ ಖರೀದಿಸಿ ಜನರಿಗಿಗೆ ನೀಡುವುದಾಗಿ ಹೇಳಿದರು. ಆದರಿಂದ ರಾಜ್ಯಗಳಿಗೆ ಲಸಿಕೆ ಖರೀದಿಸಲು ಅನುಮತಿ ನೀಡಲಾಗಿತ್ತು. ಜೂನ್ 21 ರಿಂದ ದೇಶಾದ್ಯಂತ ಎಲ್ಲಾ ಲಸಿಕೆ ಅಭಿಯಾನ ಕೇಂದ್ರ ಸರ್ಕಾರದಿಂದಲೇ ವೆಚ್ಚದಲ್ಲಿಯೇ ನಡೆಯಲಿದೆ. ನವೆಂಬರ್ ಅಂತ್ಯದ ವೇಳೆಗೆ ದೇಶದ ಬಹು ಪಾಲು ಜನರಿಗೆ ಲಸಿಕೆ ನೀಡಲಾಗುವುದು. ಭಾರತದ ವ್ಯಾಕ್ಸಿನೇಷನ್ ಸುರಕ್ಷತವಾಗಿದೆ. ವಿಶ್ವದ ಶೇ.80 ಪಾಲು ವ್ಯಾಕ್ಸಿನೇಷನ್ ಭಾರತದಲ್ಲಿ ಉತ್ಪಾದಿಸಿ ರವಾನಿಸಲಾಗುತ್ತಿದೆ.
ಕಿಮ್ಸ್ಗೆ ಸಾರ್ವಜನಿಕ ಉದ್ದಿಮೆಗಳಿಂದ
ಎಲ್ಲಾ ತರಹದ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ಈ ವೈದ್ಯಕೀಯ ಉಪಕರಣಗಳ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಡಿಟ್ ನೆಡಸಬೇಕು. ಇವುಗಳ ಸದ್ಬಳಕೆಗೆ ಅನುವು ಮಾಡಿಕೊಡಬೇಕು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಜಿಲ್ಲೆಗೆ ಅಗತ್ಯವಾದ ಆಕ್ಸಿಜನ್ಗಳನ್ನು ಕಾನ್ಸರ್ಟೇಟರ್ಸ್, ಅಗತ್ಯ ವೈದ್ಯಕೀಯ ಉಪಕರಣಗಳನ್ನು ವಿವಿಧ ಕೈಗಾರಿಕೆಗಳಿಂದ ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಜಿಲ್ಲೆಗೆ ಕೋವಿಡ್ ಆಸ್ಪತ್ರೆಯ ಅಗತ್ಯತೆ ಅರಿತು ವೇದಾಂತ ಸಂಸ್ಥೆಯ ಅನಿಲ್ ಅಗರ್ವಾಲ್ ಆಸ್ಪತ್ರೆಯನ್ನು ಮಂಜೂರು ಮಾಡಿದ್ದಾರೆ. ಅಲ್ಪಾವಧಿಯಲ್ಲಿಯೇ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕೋವಿಡ್ ತರ್ತು ಸಂದರ್ಭದಲ್ಲಿ ವೇದಾಂತ ಸಂಸ್ಥೆ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಅನಿಲ್ ಅಗರ್ವಾಲ್ ಅಭಿನಂಧನೆಗಳು ಎಂದರು.
ಲಂಡನ್ಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾದ ವೇದಾಂತ ಸಂಸ್ಥೆ ಅನಿಲ್ ಅಗರವಾಲ್ ಮಾತನಾಡಿ, ಸಮಾಜಕ್ಕೆ ಮರಳಿ ನೀಡುವ ಸಿದ್ಧಾಂತಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ಕೋವಿಡ್ ಎರಡನೇ ಅಲೆ ಜೀವನ ಮತ್ತು ಜೀವನೋಪಾಯವನ್ನು ಅಸ್ತವ್ಯಸ್ತಗೊಳಿಸಿದೆ. ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಗತ್ಯ ನೆರವು ನೀಡುತ್ತೇವೆ. ಭಾರತದಾದ್ಯಂತ 1,000 ಕೋವಿಡ್ ಕೇರ್ ಹಾಸಿಗೆಗಳನ್ನು ಸ್ಥಾಪಿಸುವ ಗುರಿ ವೇದಾಂತ ಸಂಸ್ಥೆಯದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ
ಬಸವರಾಜ್ ಹೊರಟ್ಟಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅಮೃತ್ ದೇಸಾಯಿ, ಪ್ರದೀಪ್ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ವೇದಾಂತ ಸಂಸ್ಥೆಯ ಸಿಇಓ ಸಾವಿಕ್ ಮಜುಂದಾರ್, ಸುಜಲ್ ಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.